ಮನುಷ್ಯನಲ್ಲಿ ಅಡಗಿರುವ ವಾಸನೆಯನ್ನು ಪ್ರಕಟಪಡಿಸುವ ಪ್ರಮುಖ ಅಂಗಗಳಲ್ಲಿ ಬಾಯಿಯು ಪ್ರಮುಖವಾದುದು. “ಯಾವ ವಾಸನೆಯನ್ನಾದರೂ ಸಹಿಸಬಹುದು; ಈ ಬಾಯಿಯ ವಾಸನೆಯನ್ನಲ್ಲ” ಎಂಬುದು ಎಲ್ಲರ ಅನುಭವ. ನೆಪೋಲಿಯನ್ನ ಹೆಂಡತಿಯು ಗಂಡನ ಬೆವರಿನ ವಾಸನೆಯನ್ನು ಇಷ್ಟ ಪಡುತ್ತಿದ್ದಳಂತೆ. ಆದರೆ ಅಮಲಿನಲ್ಲಿರುವಾಗಲೂ ಬಾಯಿಯ ದುರ್ವಾಸನೆಯನ್ನು ಯಾರೂ ಇಷ್ಟ ಪಡಲಾರರು. ಬಾಯಿಯ ವಾಸನೆ ಅಥವಾ ದುರ್ಗಂಧವು ಹಲವು ಬಗೆಯದಾಗಿರಬಹುದು; ಅದಕ್ಕೆ ಹಲವು ಕಾರಣಗಳಿರಬಹುದು. ಆತ್ಮೀಯರಾಗಿ ಬಳಿಗೆ ಬಂದವರು ಹಾರಿ ದೂರ ನಿಲ್ಲುವಂತೆ ಮಾಡಬಲ್ಲ ಈ ಬಾಯಿಯ ದುರ್ವಾಸನೆಯ ಕಾರಣ ಮತ್ತು ಪರಿಹಾರೋಪಾಯಗಳನ್ನು ಎಲ್ಲರೂ ತಿಳಿದಿರುವುದು ಅವಶ್ಯಕ.
ಅಯ್ಯೋ....ವಾಸನೆ !!!
ಜಗತ್ತಿನಲ್ಲಿ ೯೦ ಮಿಲಿಯಕ್ಕೂ ಅಧಿಕ ಜನರು ಬಾಯಿಯ ದುರ್ವಾಸನೆ(Chronic halitosis) ಯಿಂದ ಬಳಲುತ್ತಾರೆ. ಹೆಚ್ಚಾಗಿ ನಿಜ ಹಾಗೂ ನಾಲಗೆಯಿಂದ ಹುಟ್ಟಿಕೊಳ್ಳುವ ಸಮಸ್ಯೆ ಇದು. ಈ ದುರ್ವಾಸನೆಯು ಬಾಯಿಯಲ್ಲಿನ ಆಹಾರ ಪದಾರ್ಥದ ಮೇಲೆ ರೋಗಾಣು(Bacteria)ಗಳ ಕೆಲಸದಿಂದಾಗಿ ಉಂಟಾಗುವ ಕೊಳೆತದಿಂದ ಹಾಗೂ ಬಾಯಿಯ ಸ್ವಚ್ಛತೆಯ ನಿರ್ಲಕ್ಶ್ಯದಿಂದ(Poor oral hygiene) ಉಂಟಾಗುವುದು. ಬಾಯಿಯಲ್ಲಿ ಹೀಗೆ ಆಹಾರದ ಕೊಳೆತದಿಂದ ಗಂಧಕಾಮ್ಲ(Sulfur compounds) ಉಂಟಾಗಿ ಅದರಿಂದಾಗಿ ದುರ್ವಾಸನೆ ಕಾಣಿಸಿಕೊಳ್ಳುತ್ತದೆ.
ವಾಸನೆಗೆ ಬಹುಮುಖ :
ಮುಖ್ಯವಾಗಿ ಬಾಯಿಯ ನೈರ್ಮಲ್ಯದ ಕೊರತೆ ಹಾಗೂ ಕೆಲವೊಮ್ಮೆ ನಿಜದ ರೋಗದಿಂದಲೂ ಬಾಯಿಯು ವಾಸನೆಯೆಂಬ ರೋಗಕ್ಕೆ ತುತ್ತಾಗುತ್ತದೆ. ಆಗ ಹಲ್ಲು, ನಾಲಗೆ, ಒಳಕೆನ್ನೆ ಹಾಗೂ ತಾಲುಗಳನ್ನು ಸ್ವಚ್ಛಗೊಳಿಸುವುದರಿಂದ ಆಹಾರಪದಾರ್ಥ ಮತ್ತು ಬ್ಯಾಕ್ಟೀರಿಯಾಗಳು ತೊಲಗಿ ಸಹಜಸ್ಥಿತಿಗೆ ಬಂದು ವಾಸನೆ ದೂರಾಗುತ್ತದೆ.
ಕೆಲವು ಶಾರೀರಿಕ ಸಮಸ್ಯೆಗಳೂ ಬಾಯಿಯ ದುರ್ವಾಸನೆಗೆ ಕಾರಣವಾಗಬಹುದು. ಸಿಹಿಮೂತ್ರ, ಮೂತ್ರಪಿಂಡದ ವೈಫಲ್ಯ, ಯಕೃತ್ತಿನ ದೋಷಗಳಿಂದ ಸದಾ ಬಾಯಿ ಒಣಗಿದಂತಾಗಿ ಕೆಟ್ಟ ವಾಸನೆ ಹುಟ್ಟಬಹುದು. ತಂಬಾಕು ಸೇವನೆಯು ಕೂಡ ಒಂದು ಕಾರಣ. ಕ್ಯಾನ್ಸರ್ ರೋಗಿಗಳಿಗೆ ಕೊಡುವ ಕ್ಷ-ಕಿರಣ ಚಿಕಿತ್ಸೆಯಿಂದ ಬಾಯಿ ಒಣಗಿ ದುರ್ವಾಸನೆ ಹೊಮ್ಮಬಹುದು. ಮಾನಸಿಕ ಒತ್ತಡ, ಪಥ್ಯ(dieting), ಗೊರಕೆ, ಏರುಪ್ರಾಯ ಹಾಗೂ ಹಾರ್ಮೋನ್ ಅಸಮತೋಲನಗಳೂ ಶ್ವಾಸದ ಮೇಲೆ ಪರಿಣಾಮ ಬೀರಿ ಬಾಯ ದುರ್ವಾಸನೆಯು ಅನುಭವಕ್ಕೆ ಬರಬಹುದು. ಅತಿಮಸಾಲೆಭರಿತ ನೀರುಳ್ಳಿ, ಬೆಳ್ಳುಳ್ಳಿ ಮಿಶ್ರಿತ ಆಹಾರ, ಮಿತಿಮೀರಿದ ಕಾಫಿ ಸೇವನೆಯಿಂದಲೂ ಶ್ವಾಸದಲ್ಲಿ ೭೨ ಘಂಟೆಗಳವರೆಗೂ ಅಸಹಜ ವಾಸನೆಯು ಉಳಿದುಕೊಳ್ಳುತ್ತದೆ. ನೀರುಳ್ಳಿಯು ಪಚನಗೊಂಡ ಬಳಿಕ ಅದರ ವಾಸನೆಯು ಶ್ವಾಸಕೋಶದಿಂದಲೇ ಹೊರಹಾಕಲ್ಪಡುವುದರಿಂದ ಆಗಲೂ ಬಾಯಿಯ ದುರ್ವಾಸನೆಯು ಪ್ರಕಟಗೊಳ್ಳಬಹುದು. ಅಲ್ಪ ಪ್ರಮಾಣದಲ್ಲಿ ಬೆಳ್ಳುಳ್ಳಿಯ ಸೇವನೆಯಿಂದ ಹಲವು ದೈಹಿಕ ಕ್ರಿಯೆಗಳಿಗೆ ಅನುಕೂಲವಿದ್ದರೂ ಬೆಳ್ಳುಳ್ಳಿಯನ್ನು “ದುರ್ವಾಸನೆಯ ರಾಜ”ಯೆನ್ನದೇ ವಿಧಿಯಿಲ್ಲ. ವೈಜ್ಞಾನಿಕ ಸಂಶೋಧನೆಯಂತೆ ಬೆಳ್ಳುಳ್ಳಿಯನ್ನು ಪಾದಗಳಿಗೆ ಉಜ್ಜಿದರೂ ಅದು ಶ್ವಾಸದಲ್ಲಿ ಕಾಣಿಸುತ್ತದೆ.
ಎಂಜಲು ಎಂಬ ಏಂಜಲ್ :
ಬಾಯಿಯ ದುರ್ವಾಸನೆಯನ್ನು ದೂರವಿಡುವ ನಿಟ್ಟಿನಲ್ಲಿ ದೇವದೂತನಂತೆ ಗುಣಾತ್ಮಕ ಕೆಲಸವನ್ನು ನಿರ್ವಹಿಸುವುದು- ಎಂಜಲು. ಹಲ್ಲಿನ ಚಡಿಯಲ್ಲಿ ಸಿಕ್ಕಿಕೊಂಡ ಆಹಾರ ಕಣಗಳು ಮತ್ತು ವೈರಾಣುಗಳು ರಾತ್ರಿ ಹೊತ್ತಿನಲ್ಲಿ ಸಲೀಸಾಗಿ ಬೆಳೆಯುತ್ತವೆ. ನಿದ್ರೆಯ ಹೊತ್ತಿನಲ್ಲಿ ಎಂಜಲಿನ ಗ್ರಂಥಿಗಳ ಕಾರ್ಯಕ್ಷಮತೆಯೂ ಕುಂಠಿತಗೊಳ್ಳುವುದರಿಂದ ಸುರಕ್ಷತೆಯ ದೃಷ್ಟಿಯಿಂದ ರಾತ್ರಿ ಮಲಗುವ ಮುಂಚೆ ಕಡ್ಡಾಯವಾಗಿ ಬಾಯನ್ನು ಸ್ವಚ್ಛಗೊಳಿಸಲೇಬೇಕು. ಮಾತ್ರವಲ್ಲ, ಬೆಳಿಗ್ಗೆ ಹಲ್ಲುಜ್ಜಿದ ನಂತರವೇ ಆಹಾರ ಸೇವಿಸ ಬೇಕು. Bed Coffee ಎಂಬ ಫ್ಯಾಶನ್ನಿಂದ ನಿಶ್ಚಿತವಾಗಿಯೂ ಆರೋಗ್ಯ ಹಾಳು.
ಉಪೇಕ್ಷೆಗೆ ಒಳಗಾದ ಬಾಯಿ
ದೀರ್ಘಾವಧಿಯ ಹಸಿವು ಹಾಗೂ ದೀರ್ಘ ಉಪವಾಸದಿಂದ ಬಾಯಿಯು ಒಣಗಿ ದುರ್ವಾಸನೆಗೆ ಕಾರಣವಾಗಬಹುದಾದ್ದರಿಂದ ದೀರ್ಘಕಾಲದ ನಿರಾಹಾರವು ಒಳ್ಳೆಯದಲ್ಲ.
ಉಪಶಮನ ಹೇಗೆ?
ಬಾಯಿಯ ಸರ್ವಾಂಗ ಸ್ವಚ್ಛತೆ- ಬೆಳಿಗ್ಗೆ ಮತ್ತು ರಾತ್ರಿ ಕ್ರಮವಾಗಿ ಎರಡು ಬಾರಿ ಹಲ್ಲುಜ್ಜುವುದರ ಜೊತೆಗೆ ಪ್ರತೀ ಆಹಾರ ಸೇವನೆಯ ನಂತರವೂ ಹಲ್ಲುಜ್ಜಿದರೆ ಅತ್ಯುತ್ತಮ. ನಿಮ್ಮ ದಂತ ವೈದ್ಯರು ನೀಡುವ ಔಷಧೀಯ Mouthwash ಮತ್ತು Flossing ಅಭ್ಯಾಸ ಬೆಳೆಸಿಕೊಂಡರೆ ಒಳ್ಳೆಯದು.(ಬಳಕೆಯ ವಿಧಾನವನ್ನು ದಂತ ವೈದ್ಯರಿಂದ ತಿಳಿದುಕೊಂಡೇ ಬಳಸಿ).
ನಾಲಗೆಯನ್ನು ಪ್ರತೀ ಬಾರಿ ಹಲ್ಲುಜ್ಜುವಾಗಲೂ Toothbrush/tongue cleanerನಿಂದ ಉಜ್ಜಿ ಶುಚಿಯಾಗಿಡಿ.
ಆಗಾಗ ನೀರು ಕುಡಿದು ಬಾಯಿ ತೇವವಾಗಿರುವಂತೆ ನೋಡಿಕೊಳ್ಳಿ. ಸಕ್ಕರೆರಹಿತ chewing gum ನ ಮಿತ ಬಳಕೆಯಿಂದ ಅನುಕೂಲವಿದೆ. ದುರ್ವಾಸನೆ ಹೊಮ್ಮಿಸುವ ನೀರುಳ್ಳಿ/ಬೆಳ್ಳಿಳ್ಳಿ ಸೇವನೆಯನ್ನು ಮಿತಗೊಳಿಸಿ. ಕೃತಕ ದಂತ ಪಂಕ್ತಿ ಉಪಯೋಗಿಸುತ್ತಿದ್ದಲ್ಲಿ ಧರಿಸುವ ಮುನ್ನ ದಿನವೂ ಸ್ವಚ್ಛಗೊಳಿಸಿ. ನಿಯಮಿತವಾಗಿ ನಿಮ್ಮ ದಂತ ವೈದ್ಯರನ್ನು ಭೇಟಿಯಾಗಿ.
ಅಸ್ವಚ್ಛ ಬಾಯಿ
ಬಾಯಿಯ ಸ್ವಚ್ಛತೆ ಹಾಗೂ ದುರ್ವಾಸನೆಗೆ ಕಾರಣವಾಗಬಹುದಾದ ದೈಹಿಕ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಶೀಘ್ರವಾಗಿ ಪತ್ತೆ ಹಚ್ಚಿದರೆ ಸಂಭಾವ್ಯ ಸಂಕಟಗಳನ್ನು ಆರಂಭದಲ್ಲೇ ತಡೆಯಬಹುದು. ಅಗತ್ಯ ಬಿದ್ದರೆ ಸಂಬಂಧಿಸಿದ ತಜ್ಞ ವೈದ್ಯರನ್ನು ಸಂದರ್ಶಿಸುವಂತೆ ನಿಮ್ಮ ದಂತ ವೈದ್ಯರೇ ಸೂಚಿಸಬಹುದು. ಬಾಯಿಯೆಂದರೆ ದೇಹವೆಂಬ ಸಾಮ್ರಾಜ್ಯದ ಕೋಟೆಬಾಗಿಲು. ಕೋಟೆಯ ಬಾಗಿಲು ದುರ್ಬಲವಾಗಿದ್ದರೆ ಅಥವಾ ಸುಸ್ಥಿತಿಯಲ್ಲಿರದಿದ್ದರೆ ವೈರಿಗಳು ಒಳನುಗ್ಗುವುದು ಅತಿ ಸುಲಭ. ಅನಾರೋಗ್ಯದ ಗೂಡಾಗಿರುವ ಬಾಯಿಂದ ಅಮೃತಾನ್ನವುಂಡರೂ ಅದು ದೇಹ ಸೇರುವುದು ವಿಷವಾಗಿಯೇ. ಆದುದರಿಂದ ಬಾಯಿ- ಹಲ್ಲುಗಳ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಆರೋಗ್ಯದ ಕಾಳಜಿಯ ದೃಷ್ಟಿಯಿಂದ ಅಪೇಕ್ಷಣೀಯ ಮತ್ತು ಅನಿವಾರ್ಯ.
ಡಾ.ರೋಹಿತ್.ಎನ್.ಡಿ
ಚೈತನ್ಯ ಸ್ಪೆಷ್ಯಾಲಿಟಿ ದಂತ ಚಿಕಿತ್ಸಾಲಯ
ಯೆಯ್ಯಾಡಿ, ಮಂಗಳೂರು
0824-2224222